Saturday, December 11, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ

’ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯವನ್ನು ಕುರಿತು ಕಾಲೇಜು ವಿದ್ಯಾರ್ಥಿಗಳಿಂದ ಪ್ರಬಂಧಗಳನ್ನು ಪ್ರಣತಿ ಸಂಸ್ಥೆ ಆಹ್ವಾನಿಸುತ್ತಿದೆ. ೨೦೦೦ ಪದಗಳಿಗೆ ಸೀಮಿತವಾದಂತೆ ಸ್ಫುಟವಾದ ಲಿಪಿಯಲ್ಲಿ ಬರೆದು ಅಥವಾ ಕಂಪ್ಯೂಟರಿನಲ್ಲಿ ಟೈಪ್ ಮಾಡಿ, ಡಿಸೆಂಬರ್ ೩೦, ೨೦೧೦ ರೊಳಗೆ ನಿಮ್ಮ ಪ್ರಬಂಧ ಪ್ರಣತಿಗೆ ತಲುಪುವಂತೆ ಕಳುಹಿಸಬಹುದು. ಜೊತೆಗೆ ಕಾಲೇಜಿನ ಐಡೆಂಟಿಟಿ ಕಾರ್ಡಿನ ಪ್ರತಿ ಕಳುಹಿಸುವುದು ಅವಶ್ಯಕ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆರಿಸಿದ ಅತ್ಯುತ್ತಮ ಪ್ರಬಂಧಕ್ಕೆ ಸೂಕ್ತ ಬಹುಮಾನವಿದೆ.

ನಿಮಗೆ ಪರಿಚಿತರಾದ ಕಾಲೇಜು ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಲ್ಲು ಪ್ರೋತ್ಸಾಹಿಸಿ. ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೂ ಪ್ರಬಂಧ ಬರೆದು ಕಳುಹಿಸಿ.

ಕಂಪ್ಯೂಟರಿನಲ್ಲಿ ಟೈಪ್ ಮಾಡಿದ ಪ್ರಬಂಧಗಳನ್ನು prabandha@pranati.in ಗೆ ಕಳುಹಿಸಿ. ಲಿಖಿತ ಪ್ರಬಂಧವಾದರೆ ಈ ವಿಳಾಸಕ್ಕೆ ಕಳುಹಿಸಿ:

'ಪ್ರಣತಿ', ನಂ ೪೪೮/ಎ, ೮ನೇ ಮುಖ್ಯರಸ್ತೆ, ೭ನೇ ಅಡ್ಡರಸ್ತೆ, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು ೫೬೦೦೧೯.

ಹೆಚ್ಚಿನ ಮಾಹಿತಿಗಳಿಗೆ ಕರೆ ಮಾಡಿ - ೯೯೮೦೦೨೨೫೪೮ / ೯೬೧೧೪೫೮೬೯೮.

Saturday, December 04, 2010

ಬ್ರಹ್ಮತರಂಗಗಳ ನಡುವೆ

ಒಂದು ಕಾದಂಬರಿ ಓದಬೇಕೆಂದು "ಮಹಾಬ್ರಾಹ್ಮಣ" ಪುಸ್ತಕವನ್ನು ಹಿಡಿದೆ. ಕೆಲವು ಪುಟಗಳು ಓದುವಷ್ಟರಲ್ಲೇ ದೇವುಡು ನನ್ನನ್ನು ಬ್ರಹ್ಮತರಂಗಗಳ ನಡುವೆ ಸಿಕ್ಕಿಸಿದ್ದರು! ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ - ಈ ಆರೂ ದೋಷಗಳೂ ಕಂಡಲ್ಲಿ ವಿಜೃಂಭಿಸುವ ವ್ಯಕ್ತಿತ್ವದ ಕಥಾನಾಯಕನೊಬ್ಬನನ್ನು ತೋರಿಸಿ ಅವನ ಕುಚರಿತೆಯನ್ನು ಅದೆಷ್ಟು ಸೊಗಸಾಗಿ ನಿರೂಪಿಸುತ್ತಾ ಹೋಗುತ್ತಾರೆ! ಎರಡು ಮೂರು ತರಂಗಗಳ ಅವಧಿಯಲ್ಲೇ ಕತೆಯನ್ನು ಕೊಂಚ ಚಿವುಟುತ್ತಾರೆ! ಷಡ್ದೋಷಗಳನ್ನು ಮೆಲ್ಲಗೆ ಅಳಿಸಿ ನಾಯಕನನ್ನು ಗುಣಗಳ ಖನಿಯನ್ನಾಗಿ ಮಾಡುತ್ತಾರೆ. ಕತೆ ಹೇಳುತ್ತಾ ಹೇಳುತ್ತಾ ವೇದೋಪನಿಷತ್ತುಗಳನ್ನು ಅಗೆದಗೆದು ಹೊರತೆಗೆದ ಹತ್ತು ಹಲವು ಅನರ್ಘ್ಯ ವಿಚಾರಗಳ ದರ್ಶನವನ್ನು ಮಾಡಿಸುತ್ತಾರೆ.

ಅರ್ಧ ಪುಸ್ತಕ ಓದುವಷ್ಟರಲ್ಲೇ ಅದೇಕೋ ನನ್ನಲ್ಲಿ "ಮಹಾಬ್ರಾಹ್ಮಣನಲ್ಲದಿದ್ದರೂ, ನಾನೂ ಬ್ರಾಹ್ಮಣನಾದರೂ ಆಗಬೇಕು" ಎಂಬ ಆಸೆ ಹುಟ್ಟಿತು! ಇಂದಿನ ವಿಜ್ಞಾನಿಗಳು ಇನ್ನೂ ಭೇದಿಸದ ಪಿಂಡಾಂಡದ ಅನೇಕ ಭಾಗಗಳು ಈ ಪುಸ್ತಕದಲ್ಲಿ ಪ್ರತ್ಯಕ್ಷವಾಗುತ್ತವೆ, ಒಂದೊಂದು ನಾಡಿಯೂ ನುಡಿಯುತ್ತಿರುತ್ತದೆ. ವಾಸ್ತವ ಮರೆತು ಎಲ್ಲೋ ಯಾವುದೋ ಲೋಕಕ್ಕೆ ಹೋದ ಹಾಗೆ ಅನ್ನಿಸಿಬಿಡುತ್ತದೆ!

"ಒಬ್ಬೊಬ್ಬ ವ್ಯಕ್ತಿಗೂ ಸ್ವಭಾವ ಎಂಬ ಅವನದೇ ಆದ ಪ್ರತ್ಯೇಕ ಗುರುತಿರುತ್ತದೆ. ಆ ಸ್ವಭಾವ ಅಥವಾ ವ್ಯಕ್ತಿತ್ವದ ಪ್ರಕಾರವೇ ಅವರವರ ವಿಕಾಸ" ಎಂದು ವೇದಾಂತ ಹೇಳುತ್ತದೆಂದು ಕೇಳಿದ್ದೇನೆ. "ಮಹಾಬ್ರಾಹ್ಮಣ"ನ ಕತೆ ಅದಕ್ಕೊಂದು ಸ್ಪಷ್ಟ ನಿದರ್ಶನ. ಈ ಪುಸ್ತಕದಲ್ಲಿರುವುದು ಹೊಸ ಕತೆಯೇನೂ ಅಲ್ಲ. ಪುರಾಣಪ್ರಸಿದ್ಧವಾದ ಕತೆಯೊಂದನ್ನೇ ಆಯ್ದುಕೊಂಡು ಹತ್ತು ಹಲವು ಕಡೆ ಚೂರು ಚೂರಾಗಿ ಸಿಗುವ ವಿಚಾರಗಳನ್ನು ಸೊಗಸಾಗಿ ಜೋಡಿಸಿ "ಮಹಾಬ್ರಾಹ್ಮಣ" ಪುಸ್ತಕವನ್ನು ಬರೆದಿದ್ದಾರೆ ದೇವುಡು. ಓದಲು ಬಹಳ ಚೆನ್ನಾಗಿದೆ, ಓದಿ!

Monday, November 29, 2010

ಬ್ಯಾಡ್ ಲಕ್ ಬೆಟ್ಟ - ಹತ್ತಿ ಹತ್ತಿ ಸುಸ್ತಾಯ್ತು!

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರು ಸರ್ತಿ ಅಮ್ಮೇದಿಕ್ಕೆಲ್ ಬೆಟ್ಟಕ್ಕೆ ಚಾರಣ ಮಾಡಲು ಯೋಜನೆ ಹಾಕಿದರೂ ಫಲಿಸಿರಲಿಲ್ಲ. ಒಂದು ಸರ್ತಿ ತೀರ ಹತ್ತಿರ ಹೋಗಿ ಕಾರಣಾಂತರದಿಂದ ಬೇರೊಂದು ಕಡೆ ಚಾರಣಕ್ಕೆ ಹೋಗಬೇಕಾಗಿತು. ಇನ್ನೊಂದು ಸರ್ತಿ ಬಹಳ ಮಳೆ, ಮತ್ತೊಂದು ಸರ್ತಿ ಕೆಲಸ. ಬೇಜಾರಾಗಿ "ಬ್ಯಾಡ್ ಲಕ್ ಬೆಟ್ಟ" ಅಂತ ಅಮ್ಮೇದಿಕ್ಕೆಲ್ಗೆ ಹೆಸರೂ ಇಟ್ಟುಬಿಟ್ಟೆ. ಮೊನ್ನೆ ಗೆಳೆಯನೊಬ್ಬ ಅಮ್ಮೇದಿಕ್ಕಲ್ ಹತ್ತಲು ಕರೆದಾಗ ಮೀನ ಮೇಷ ಎಣಿಸಿ ಅವನ ಬಲವಂತದಿಂದ ಒಪ್ಪಿ ಹೊರಟೆ. ದಾರಿಯಲ್ಲಿ ಎರಡು ಸರ್ತಿ ಬಸ್ ಕೆಟ್ಟುಹೋಯಿತು, ಚಾರಣ ಶುರು ಮಾಡುವುದು ಮೂರ್ನಾಲ್ಕು ಗಂಟೆ ತಡವಾಯಿತು. ಇದು ಬ್ಯಾಡ್ ಲಕ್ ಬೆಟ್ಟವೇ ದಿಟ ಎಂದು ನಿರ್ಧರಿಸಿಬಿಟ್ಟೆ.

ಮೊದಲ ನೋಟ

ಅಂತೂ ಹೋದ ಕರ್ಮಕ್ಕೆ ಹತ್ತಲು ಶುರು ಮಾಡಿದೆ. ಶುರುವಿನಲ್ಲೇ ಏರುಹಾದಿ. ಜೊತೆಗೆ ಸೂಜಿ ಚುಚ್ಚಿದಂತೆ, ಚುರ್ರ್ ಎನ್ನುವಂತೆ ಕಚ್ಚುವ ನಯ-ನಾಜೂಕಿಲ್ಲದ ಜಿಗಣೆಗಳು, ದಟ್ಟವಾದ ಕಾಡಿನಲ್ಲೂ ಕಾಡುವ ಸೆಕೆ, ಬಾಯಾರಿ ತಲೆ ತಿರುಗಿ ಬೀಳುವಂತಾದರೂ ಕಾಣದ ನೀರು, ಚೆನ್ನಾಗಿರುವ ದೃಶ್ಯಗಳಂತೂ ಇಲ್ಲವೇ ಇಲ್ಲ. ಮೊದಲ ಒಂದುವರೆ ಗಂಟೆ ಚಾರಣವಂತೂ ಬೈಕೊಂಡೇ ಹತ್ತಿದೆ. ಥೂ, ಇದೇನು ಬೆಟ್ಟಾನಾ? ಪಶ್ಚಿಮ ಘಟ್ಟಾನಾ?

ಅಷ್ಟು ಹೊತ್ತಿಗೆ ಸಿಕ್ಕಿತು ಒಂದು ಸಣ್ಣ ತೊರೆ. ಜೀವ ಬಂತು. ಆದಾದಮೇಲೆ ಇನ್ನೊಂದು ಸ್ವಲ್ಪ ಹತ್ತಿದಮೇಲೆ ಸ್ವಲ್ಪ, ಅಲ್ಲ ಸ್ವಲ್ಪವೇ ಇಳಿಜಾರು. ಒಂದು ಸಣ್ಣ ಗುಡ್ಡ ಇಳಿಯುವ ತನಕ. ಅದಾದಮೇಲೆ, ಭೀಮಾಕಾರವಾಗಿ ಕಾಣುವ ಬೆಟ್ಟ. ಸ್ವಲ್ಪ ಸುತ್ತಿ ಬಳಸಿ ಬರೋಬ್ಬರಿ ಎಂಭತ್ತು ಡಿಗ್ರೀಗೆ ಗೀಟೆಳೆದರೆ ಅದೇ ಹತ್ತುವ ದಾರಿ. "ಅಲ್ಲೆರಡು ಜೋಡಿ ಕಲ್ಲು ಕಾಣ್ತಾ ಉಂಟಲ್ಲ, ಅಲ್ಲಿ ನೀರು ಸಿಗುತ್ತೆ" ಅನ್ನುತಾರೆ ನಮ್ಮ ಮಾರ್ಗದರ್ಶಕರು. ಅರ್ಧ ಕಿಲೋಮೀಟರ್ ಇದ್ದಂಗೆ ಕಾಣುತ್ತದೆ, ಆದರೆ ಆ ಏರುದಾರಿಯನ್ನು ಹತ್ತುವದು? ಉಹೂ! ಈಗ ಕಾಡೂ ಮಾಯ, ಸೂರ್ಯನ ಬಿಸಿಲೊಂದೇ! ಅರ್ಧ ಕಿಲೋಮೀಟರ್ ಹತ್ತಲು ಅರ್ಧ-ಮುಕ್ಕಾಲು ಗಂಟೆ. ನೀರು ಸಿಕ್ಕಲ್ಲೇ ಸ್ವರ್ಗ, ಅಲ್ಲೇ ಊಟ. ಮತ್ತೆ ಹತ್ತಬೇಕು ಎಂಭತ್ತು ಡಿಗ್ರೀ ಕೋನದಲ್ಲಿ, ಆದರೆ ಸ್ವಲ್ಪ ಕಷ್ಟಪಟ್ಟು ಹತ್ತಿದರೆ ಒಂದು ಗುಹೆಯ ಮಾದರಿಯ ಜಾಗ ಸಿಗುತ್ತದೆ. ಅಲ್ಲಿ ಬ್ಯಾಗುಗಳನ್ನಿಟ್ಟು ನೀರಿನ ಬಾಟಲಿ ಮಾತ್ರ ಕೈಲಿ ಹಿಡಿದು ತುದಿಯ ಕಡೆ ನಡೆದೆವು.

ಹತ್ತಿರದಿಂದ

ಆ ದಾರಿಯಲ್ಲಿ ಹೆಚ್ಚಿನ ಭಾಗ ಕಲ್ಲುಗಳೇ, ಒಂದೊಂದು ಹೆಜ್ಜೆಯೂ ಎರಡೆರಡು ಅಡಿಯಷ್ಟು ಎತ್ತರ, ಜೊತೆಗೆ ಪಾಚಿ ಬೇರೆ! ಒಂದೊಂದು ಕಡೆಯಂತೂ ಹೆಜ್ಜೆ ಇಡಲು ಅರ್ಧ ಅಡಿ ಜಾಗ, ಪಕ್ಕದಲ್ಲಿ ಕಡಿಮೆ ಎಂದರೂ ಸಾವಿರ ಅಡಿ ಪ್ರಪಾತ. ಬೇಕಾದಾಗ ನೀರಂತೂ ಸಿಗುವುದೇ ಇಲ್ಲ. ಹಾಗೂ ಹೀಗೂ ತಳ್ಳಿಕೊಂಡು ತುದಿ ಮುಟ್ಟಿದೆ. ಒಂಭತ್ತು ಗುಡ್ಡ, ಎತ್ತಿನ ಭುಜ, ಮಿಂಚುಕಲ್ಲು, ಜೇನುಕಲ್ಲು - ಹತ್ತಾರು ಬೆಟ್ಟಗಳ ತುದಿಗಳು ಮಂಜುಮಂಜಾಗಿ ಕಾಣುತ್ತಿದ್ದವು. ಯಾಕೋ ಆ ದೃಶ್ಯ ನನಗೆ ತೃಪ್ತಿಯಾಗುವಷ್ಟು ಹಿಡಿಸಲಿಲ್ಲ. ಇಷ್ಟೆಲ್ಲಾ ಹತ್ತಿದ್ದಕ್ಕೆ ಇದು ಏನೂ ಪ್ರಯೋಜನವಿಲ್ಲ ಅನ್ನಿಸಿಬಿಟ್ಟಿತು. ಮಳೆ ಇನ್ನೂ ಪೂರ್ತಿ ನಿಲ್ಲದಿರುವಾಗಲೇ ಹಸಿರಿಗೆ ಒಣಗಿ ಹಳದಿಯಾಗುವಷ್ಟು ವಯಸ್ಸಾಗಿತ್ತು, ಕಳೆ ಕಳೆದುಹೋಗಿತ್ತು. ಇರುವುದರಲ್ಲಿ ಒಂದಷ್ಟು ಸೌಂದರ್ಯ ಹುಡುಕಿ ನೋಡಿದೆ. ದೂರದಲ್ಲಿದ್ದ ಹೊಳೆಗಳು, ಕೆರೆಗಳು ಸಂಜೆಯ ಹೊಂಬೆಳಕಿಗೆ ಕರಗಿದ ಚಿನ್ನದಂತೆ ಕಂಡ ಅದ್ಭುತವೊಂದೇ ನನ್ನ ಕಣ್ಮನ ಸೆಳೆದ ದೃಶ್ಯ. ಉಳಿದವೆಲ್ಲ ಅಷ್ಟೊಂದು ಸ್ವಾರಸ್ಯವಿಲ್ಲ.

ಕ್ಯಾಮರಾ ಕೈಚಳಕ

ರಾತ್ರಿಯ ವೇಳೆಗೆ ಮತ್ತೆ ನಮ್ಮ ಬ್ಯಾಗ್ ಇಟ್ಟಿದ್ದ ಗುಹೆಗೆ ಬಂದು ಟೆಂಟ್ ಹಾಕಿ ಮಲಗಿದೆವು. ರಾತ್ರಿ ಗಾಳಿ ಜೋರಾಗಿತ್ತು, ಚಳಿಯೂ ಸುಮಾರಾಗಿತ್ತು. ಬೆಳಗ್ಗೆ ಸೂರ್ಯೋದಯದ ಸಮಯದಲ್ಲೂ ಮೋಡ ಮುಚ್ಚಿಕೊಂಡು ಮೋಸವಾಯಿತು. ಎಷ್ಟೇ ಆದರೂ "ಬ್ಯಾಡ್ ಲಕ್ ಬೆಟ್ಟ" ಅಲ್ಲವೇ? ಎಂಭತ್ತು ಡಿಗ್ರೀ ಇಳಿಜಾರನ್ನು ಇಳಿಯಲೂ ಪ್ರಯಾಸವೇ ಆಯಿತು. ನಂತರದ ಕೊನೆಯ ಕಾಡುದಾರಿ ಸ್ವಲ್ಪ ಹಿತವಾಗಿತ್ತಷ್ಟೇ.


ಬಿದ್ದೀರ ಹುಷಾರ್!!

ನನಗೆ ಇದು ಅಷ್ಟೇನೂ ಸ್ವಾರಸ್ಯಕರ ಚಾರಣವಲ್ಲ. ಇಷ್ಟೆಲ್ಲ ಹತ್ತಿದರೂ ಕಾಲು ಹೆಚ್ಚು ನೋಯಲಿಲ್ಲ ಎಂಬುದು ಬೇಸರದ, ಅರ್ಥವಾಗದ ಸಂಗತಿ. ಹತ್ತುವ ಹುಚ್ಚಿದ್ದವರು ಹೋಗಬಹುದು. ನನಗಂತೂ ಇದು "ಬ್ಯಾಡ್ ಲಕ್ ಬೆಟ್ಟ". ಮತ್ತೆ ಹೋಗುವ ಇರಾದೆಯಂತೂ ನನಗೆ ಸಧ್ಯಕ್ಕಿಲ್ಲ. ಬೆಂಗಳೂರಿಗಿಂತ ವಾಸಿ ಎಂದು ಎಂದಾದರೂ ಹೋದೇನು ಅಷ್ಟೇ.

Sunday, May 02, 2010

ಪರಿಸರಪ್ರಿಯರಿಗೆ ಸಿಹಿ ಸುದ್ದಿ...

ಸಹ್ಯಾದ್ರಿ ಬೆಟ್ಟಗಳಲ್ಲಿರುವ ಕರ್ನಾಟಕದ ಎಷ್ಟೋ ಚೆಂದದ ಜಾಗಗಳು ಚಾರಣಕ್ಕೆ ಹೋಗಿ ಪ್ಲಾಸ್ಟಿಕ್ ಚೀಲಗಳನ್ನು, ಕಳ್ಳಿನ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಬರುವ ಕೊಳಕು ಮಂದಿಯಿಂದ ಕೆಟ್ಟು ಹೋಗಿವೆ, ಇನ್ನೂ ಕೆಟ್ಟು ಹೋಗುತ್ತಿವೆ. ಈ ಹಾವಳಿಯನ್ನು ನೋಡಿದರೆ ನಮ್ಮಲ್ಲೇ ಎಷ್ಟೋ ಮಂದಿಗೆ ಬೇಜಾರು ಬರುತ್ತದೆ ಎಂದರೆ ಇನ್ನು ಅಲ್ಲಿಯೇ ಬದುಕಬೇಕಾದ ಪ್ರಾಣಿಗಳ ಪಾಡೇನು?

ಇಷ್ಟರ ನಡುವೆಯೂ ಕೊಡಗಿನ ತಡಿಯಂಡಮೋಳ್ ಬೆಟ್ಟದ ಆಸುಪಾಸಿನಲ್ಲಿ ಎರಡು ಹುಲಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆಯಂತೆ. ಬ್ರಹ್ಮಗಿರಿ ಪರ್ವತಶ್ರೇಣಿಯಲ್ಲೂ ಹುಲಿಗಳು ಆಗಾಗ ಕಾಣಿಸಿಕೊಳ್ಳುತ್ತಿವೆಯಂತೆ. ಸ್ಥಳೀಯರ ಹಸು ಮೊದಲಾದ ಸಾಕುಪ್ರಾಣಿಗಳನ್ನು ಆಗಾಗ ಬೇಟೆಯಾಡುತ್ತಿರುವ ವರದಿಗಳೂ ಇವೆ. ಈ ಸುದ್ದಿಯನ್ನೆಲ್ಲ ಕೇಳಿ ನಮ್ಮ ಅರಣ್ಯ ಇಲಾಖೆಯವರು ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಹೋಗದಿರುವಂತೆ, ಅಲ್ಲೆಲ್ಲೂ ಡೇರಿ ಹಾಕಿ ತಂಗದಿರುವಂತೆ ಪ್ರವಾಸಿಗಳಿಗೆ ಎಚ್ಚರ ನೀಡುತ್ತಿದ್ದಾರೆ. ಕೂರ್ಗ್.ಕಾಮ್ ವೆಬ್ಸೈಟಿನಲ್ಲಿ ಈ ಸುದ್ದಿ ಪ್ರಕಟವಾಗಿದೆ.

ಇನ್ನೊಂದು ಸಿಹಿ ಸುದ್ದಿ ಎಂದರೆ ಕೊಡಚಾದ್ರಿಯ ’ಬಿಯರ್ ಬಂಗಲೆ’ಯಾಗಿರುವ ಅರಣ್ಯ ಇಲಾಖೆಯ ಬಂಗಲೆಗೆ ಈಗ ಜೀಪು ದಾರಿ ನಡಿವಿನಲ್ಲೆಲ್ಲೋ ಕಡಿದುಹೋಗಿದೆಯಂತೆ. ಹಾಗಾಗಿ ಅಲ್ಲೂ ಕೊಳಕರ ಹಾವಳಿ ಕಡಿಮೆಯಾಗಿರಬೇಕು. ಅಲ್ಲಿಯೂ ಕೊಳಕರ ಹಾವಳಿ ಕಡಿಮೆಯಾಗಿರಬೇಕು.

ಇತ್ತೀಚೆಗೆ ಪರಿಸರವನ್ನು ಶುಚಿಯಾಗಿಡಬೇಕು ಎಂಬ ನನ್ನಂಥ ಆದರ್ಶವಂತರಿಗೆ ಬೆಟ್ಟಗಳಲ್ಲಿ ತುಂಬಿರುವ ಕೊಳಕೇ ಚಾರಣಕ್ಕೆ ಹೋಗದಿರುವಂತೆ ಮಾಡುತ್ತಿದೆ. ನಿಜ ಹೇಳಬೇಕೆಂದರೆ, ಈ ಮಳೆಗಾಲದ ಮೊದಲಲ್ಲೇ ತಡಿಯಂಡಮೋಳ್ ಬೆಟ್ಟ ಹತ್ತಬೇಕು ಎಂದು ಲೆಕ್ಕ ಹಾಕುತ್ತಿದ್ದೆ. ನನಗೂ ಹುಲಿ ನೋಡುವ ಹುಚ್ಚು ಕೆಲವು ವರ್ಷಗಳಿಂದಲೇ ಇದೆ. ಈಗ ಹೋಗುವುದಕ್ಕಾಗುತ್ತದೋ ಇಲ್ಲವೋ ನೋಡಬೇಕು.

ಈಗ ಹೋಗಲು ಆಗದಿದ್ದರೂ, ಈ ಹುಲಿಗಳ ಕಾರಣದಿಂದಲಾದರೂ ಕೊಳಕು ಜನರ ಹಾವಳಿ ಅಲ್ಲಿ ಕಡಿಮೆಯಾಗಲಿ. ಕಾಡು ಮತ್ತೆ ಪ್ರಾಣಿಗಳದ್ದಾಗಲಿ.

Saturday, April 17, 2010

ನರಸಿಂಹ ಯುದ್ಧಂ - ಒಂದು ವಿಭಿನ್ನ ನಾಟಕ

"ನಮ್ಮ ರಾಜ್ಯದ ಪ್ರಜೆಗಳೆಲ್ಲರೂ ಸುಖವಾಗಿರುವರಷ್ಟೇ? ನಮ್ಮ ನಾಡಿನಲ್ಲಿ ಎಲ್ಲೆಡೆಯೂ ಸುಖ ಸಮೃದ್ಧಿ ಇರುವುದಷ್ಟೇ?" ಎನ್ನುವ ಪಕ್ಕಾ ತಾತರಾಯನ ಕಾಲದ ಪೌರಾಣಿಕ ನಾಟಕದ ಮಂತ್ರಿಗಳನ್ನೂ ಬಹುಶಃ ನೋಡಿರುತ್ತೀರಿ, ಆದರೆ ನಾಟಕದಲ್ಲಿ ಮಾತ್ರ. ಕಲಿಯುಗದ ಕಾಲು ಭಾಗವೂ ಮುಗಿದಿಲ್ಲವಂತೆ. ಅದಕ್ಕೇ ಇರಬೇಕು, ಇಂದಿನ ಮಂತ್ರಿಗಳು ಇನ್ನೂ ಕದ್ದು ಮುಚ್ಚಿ ಲಂಚ ತಿನ್ನುತ್ತಾರೆ! ಭ್ರಷ್ಟಾಚಾರವನ್ನು ಸಕ್ರಮಗೊಳಿಸುವೆವೆಂದು ಆಶ್ವಾಸನೆ ಕೊಟ್ಟು ಅದನ್ನೇ ಚುನಾವಣೆಯ ಬಂಡವಾಳವನ್ನಾಗಿ ಮಾಡಿಕೊಳ್ಳುವ ಮಂತ್ರಿಗಳೂ ಇಷ್ಟರಲ್ಲೇ ಹುಟ್ಟಿ ಬರುತ್ತಾರೆ; ನೀವೂ ನೋಡುವಿರಿ. ಇನ್ನು, ಸುಮಾರಾಗಿ ಪ್ರಾಮಾಣಿಕರು ಎನ್ನುವಂಥ ಮಂತ್ರಿಗಳೂ ಇರುತ್ತಾರೆ; ನಾವೂ ಒಬ್ಬಿಬ್ಬರನ್ನು ನೋಡಿರುತ್ತೀವಿ.

ಆದರೆ ಈ ಎಲ್ಲಾ ರೀತಿಗಳನ್ನೂ ಒಂದೇ ಕಡೆ ನೋಡಿದ್ದುಂಟೇ? ’ನರಸಿಂಹ ಯುದ್ಧಂ’ ಎನ್ನುವ ನಾಟಕ ನೋಡಿದ ಜನರಿಗೆ ಮೈಂಡ್ರೈ.ಇನ್ ತಂಡದವರು ರಂಗಮಂಚದ ಮೇಲಂತೂ ಹೆಚ್ಚು-ಕಮ್ಮಿ ಇಷ್ಟೂ ರೀತಿಗಳನ್ನೂ ಒಂದೇ ನಾಟಕದಲ್ಲಿ ಪ್ರದರ್ಶಿಸಿದರು. ಹವ್ಯಾಸಕ್ಕೆ ವಿನೋದದ ವಿಡಿಯೋಗಳನ್ನು ಮಾಡುತ್ತಿದ್ದ ಮೈಂಡ್ರೈ.ಇನ್ ತಂಡದವರು ಅದನ್ನು ಅಂತರ್ಜಾಲದ ಮೂಲಕ ಜನಕ್ಕೆ ತಲುಪಿಸಿ ಜನರ ಮೆಚ್ಚುಗೆ ಸಂಪಾದಿಸಿದ್ದು ಈಗ ಒಂದೆರಡು ವರ್ಷದ ಇತಿಹಾಸ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆಸಕ್ತಿಯಿಂದ ಇದೇ ’ನರಸಿಂಹ ಯುದ್ಧಂ’ ನಾಟಕದ ಮೊದಲ ಪ್ರದರ್ಶನ ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತು. ಈಗ ಕಥೆಯನ್ನು ಸ್ವಲ್ಪ ತಿರುಚಿ ಅದೇ ನಾಟಕವನ್ನು ಇನ್ನಷ್ಟು ಚೆನ್ನಾಗಿ ಮಾಡಿದ್ದಾರೆ.

ನಾಟಕದ ವಿಷಯ ಏನೆಂದು ನಾನು ಹೇಳುವುದಿಲ್ಲ. ಅವರೇ ನಾಟಕಕ್ಕೆ ಹೋದವರಿಗೆ ಹಂಚಿದ ಚೀಟಿಯಲ್ಲಿ ಚಿಕ್ಕದಾಗಿ ನಾಟಕದ ವಿಷಯ ತಿಳಿಸುತ್ತಾರೆ. ಅದನ್ನೇ ಕೊನೆಯಲ್ಲಿ ಯಥಾವತ್ತಾಗಿ ಬರೆಯುತ್ತೇನೆ. ಆದರೆ ಅವರು ಹೇಳಿಕೊಳ್ಳದ ಕೆಲವು ವಿಷಗಳನ್ನು ಮಾತ್ರ ತಿಳಿಸಲು ಬಯಸುತ್ತೇನೆ.

ಈ ತಂಡದ ಹಿರಿವಂತಿಕೆ ಎಂದರೆ ಸಂಪ್ರದಾಯಕ್ಕೆ ಅಂಟುಕೊಳ್ಳದಿರುವುದು! ಇವರ ನಾಟಕಕ್ಕೆ ಸೂತ್ರವಿದೆ, ಸೂತ್ರಧಾರನಿಲ್ಲ! ಮೋಜಿನ ಕಲಬೆರಕೆ ಹಾಡುಗಳಿವೆ, ಆದರೆ ನಾಟಕದ ವಸ್ತುವಿಗೆ ಸಂಬಂಧವಿಲ್ಲದ ಹಾಡುಗಳು! ತಮ್ಮ ಪ್ರತಿಭೆಯನ್ನು ರಂಗಮಂಚದ ಮೇಲೆ ತೋರಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ ನಾಟಕದ ಪಾತ್ರಧಾರಿಗಳೆಲ್ಲಾ ಹವ್ಯಾಸಿ ಕಲಾವಿದರು. ಇವರಿಗೊಬ್ಬ ಹವ್ಯಾಸಿ ನಿರ್ದೇಶಕ ಕೂಡ! ’ಇನ್ನು ಐವತ್ತೆರಡೇ ಸೆಕೆಂಡುಗಳಲ್ಲಿ ನಾಟಕ ಶುರುವಾಗುತ್ತದೆ’ ಎಂಬ ಮೊದಲನೆಯ ವಾಕ್ಯದಿಂದ ಕೊನೆಯ ತನಕವೂ ಶುದ್ಧ ತರಲೆ ತುಂಬಿದ ವಾಕ್ಯಗಳು! ಆದರೆ ನಾಟಕದ ವಸ್ತು ಅಷ್ಟೇ ಅರ್ಥಪೂರ್ಣ, ಸ್ವಸ್ಥ ಸಮಾಜಕ್ಕೆ ಅವಶ್ಯಕ ಕೂಡ. ಈ ಮಂದಿ ಜುಬ್ಬ-ಪ್ಯಾಂಟ್ ಹಾಕಿ ರಾಜನ ಪಾತ್ರ ಮಾಡುತ್ತಾರೆ, ಕ್ರಿಕೆಟಿಗನನ್ನು ರಾಜಕಾರಣಿ ಮಾಡುವುದಲ್ಲದೇ ಕ್ರಿಕೆಟ್ ಆಡಲು ಉಪಯೋಗಿಸುವ ಬಿಳಿಯ ಉಡುಗೆಯನ್ನೇ ರಾಜಕಾರಣಿಗೂ ಹಾಕುತ್ತಾರೆ! ಸಂಪ್ರದಾಯಕ್ಕೆ ಹೋಲಿಸಿದರೆ ಎಲ್ಲೆಲ್ಲೂ ವಿಭಿನ್ನತೆ, ವಿಶಿಷ್ಟತೆ!

ನೀವು ನಾಟಕದ ವಿಷಯದಲ್ಲಿ ಸಂಪ್ರದಾಯಸ್ಥರಾದರೂ ಸಂಪ್ರದಾಯ ಮುರಿವ, ಮರೆಸುವ ಈ ತಂಡದವನ್ನು ನೋಡಬೇಕು. ಯಾವುದೇ ಪ್ರಸಿದ್ಧ ನಾಟಕದ ಕಂಪನಿಗೂ ಸೇರದೇ ಹವ್ಯಾಸಿಗಳು ಏನನ್ನು ಸಾಧಿಸಿದ್ದಾರೆ ಎಂದು ಒಮ್ಮೆಯಾದರೂ ನೋಡಿ. ನೀವು ವಿನೋದಪ್ರಿಯರೋ ಅಲ್ಲವೋ, ಮೊದಲ ನಿಮಿಷದಿಂದ ಕೊನೆಯ ನಿಮಿಷದ ತನಕವೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ, ನಡುವೆ ಹತ್ತು ನಿಮಿಷದ ವಿರಾಮ ಬಿಟ್ಟು!

ಹಾಸ್ಯ ಇವರ ನಾಟಕದ ಜೀವಾಳ. ಆದರೆ ನಾಟಕದ ಸಂದೇಶ ತಿಳಿಯಲು ಹಾಸ್ಯವೇ ಬಾಧಕವೂ ಕೂಡ. ನಾಟಕ ನೋಡುತ್ತಾ ನೋಡುತ್ತಾ ನಗುವಿನಲ್ಲೇ ನೀವು ಕಳೆದುಹೋಗಬಹುದು. ನಗುತ್ತಲೇ ನಾಟಕದ ಸಂದೇಶವನ್ನೂ ತಿಳಿಯುವುದು ಸ್ವಲ್ಪ ಕಷ್ಟವೇ. ಒಂದೊಂದು ನಗೆಹನಿಯ ಹಿಂದೆಯೂ ಒಂದೊಂದು ಸಂದೇಶದ ಮಣಿ ಇರುತ್ತದೆ. ಕೊನೆಯಲ್ಲಿ ಮಣಿಗಳನ್ನೆಲ್ಲಾ ಪೋಣಿಸಿದರೆ ಮಾತ್ರ ನಾಟಕದ ಸಂದೇಶ ನಿಮಗೆ ತಿಳಿಯುತ್ತದೆ. ಇದರ ಬಗ್ಗೆ ಎಚ್ಚರವಿಲ್ಲದಿದ್ದರೆ ಒಂದುವರೆ ತಾಸು ಚೆನ್ನಾಗಿ ನಕ್ಕು ಬರುತ್ತೀರಿ ಅಷ್ಟೇ!

ಸಂಪ್ರದಾಯದ ಪ್ರಕಾರ ನಾಟಕ ಮಾಡುವ ಮಂದಿ ಇದ್ದಾರೆ. ಆದರೆ ಕಲಾವಿದನೊಬ್ಬ ಸಂಪ್ರದಾಯಕ್ಕೆ ಅಂಟಿಕೊಂಡರೆ ನಾಟಕನ್ನು ತನ್ನ ವೃತ್ತಿ ಅಥವಾ ಕಿರುವೃತ್ತಿಯನ್ನಾದರೂ ಮಾಡಿಕೊಳ್ಳಬೇಕು. ಹಾಗೆ ಮಾಡದೆಯೂ ಯಶಸ್ಸು ಸಾಧಿಸಿರುವ, ಸಾಧಿಸುತ್ತಿರುವ ಕೆಲವೇ ಮಂದಿಯಲ್ಲಿ ಮೈಂಡ್ರೈ.ಇನ್ ತಂಡದವರೂ ಸೇರುತ್ತಾರೆ.

ನಾಟಕದ ಬಗ್ಗೆ - ಅವರೇ ಹೇಳಿಕೊಳ್ಳುವಂತೆ:

"ನರಸಿಂಹ ಯುದ್ಧಂ - ಒಂದು ಪ್ರೇಮದ ಕಥೆ" - ಮೈಂಡ್ರೈ.ಇನ್ ತಂಡದ ಎರಡನೆಯ ಪ್ರಸ್ತುತಿ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಒಂದು ವಿಡಂಬನೆಯಾಗಿದ್ದು, ಈ ನಾಟಕದ ಮಧ್ಯೆ ನವಿರಾದ ಪ್ರೇಮಕಥೆಯು ಹಾಸುಹೊಕ್ಕಾಗಿದೆ. ರಾಜಕೀಯ ಚದುರಂಗ, ಮಾಧ್ಯಮಗಳು ವೀಕ್ಷಕರನ್ನು ಸೆಳೆಯಲು ಮಾಡುವ ತಂತ್ರಗಳು, ರಾಜಕಾರಣಿಗಳ ಬಂಡವಾಳವಿಲ್ಲದ ಬಡಾಯಿ, ಈ ವಿಷಯಗಳನ್ನೊಳಗೊಂಡು ನಮ್ಮ ನಾಟಕವು ಏಪ್ರಿಲ್ ೯-ನೇ ತಾರೀಕು ಸಂಜೆ ೬:೩೦-ಕ್ಕೆ ಮತ್ತು ೧೧-ನೇ ತಾರೀಕು ಸಂಜೆ ೭:೩೦-ಕ್ಕೆ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾ ಸೌಧದಲ್ಲಿ ಪ್ರದರ್ಶನಗಳು ಕಾಣಲಿದೆ.

ನಾಟಕದಲ್ಲಿ ಪ್ರಮುಖ ಪಾತ್ರವಾದ ಪ್ರಧಾನ ಮಂತ್ರಿಯ ಊಂದು ಕೃತ್ಯದಿಂದ ಆಡಳಿತ ಪಕ್ಷವು ಮತ್ತೊಮ್ಮೆ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಆ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯ ಎದುರಾಳಿಯಾಗಿ ಬರುವ ಹಮ್ಮೀರನೆಂದರೆ, ಹೆಸರಾಂತ ಮಾಜಿ ರಣಜಿ ಕ್ರಿಕೆಟ್ ಪಟು ಸಿಂಹ. ಜನರೆಲ್ಲರೂ ಅಲ್ಪರು, ತಾನೂ ಅಲ್ಪ, ಆ ಭಗವಂತನ ಮುಂದೆ ಎಲ್ಲರೂ ಅಲ್ಪರೇ ಎಂದು ಭಾವಿಸುರ ಈ ವಿನಯವಂತ ಕ್ರೀಡಾಪಟು ದೇಶದ ಪರಿಸ್ಥಿತಿಯನ್ನು ಕಾಣಲಾಗದೇ ರಾಜಕೀಯದ ರೌದ್ರ ರಣರಂಗಕ್ಕೆ ಇಳಿಯಲು ನಿರ್ಧರಿಸುತ್ತಾನೆ. ಇವರೀರ್ವರ ಹಣಾನಣಿ ನಡೆಯುವ ಹಿನ್ನೆಲೆಯಲ್ಲಿ, ಮಾಧ್ಯಮ ಪ್ರತಿನಿಧಿ ಮೇಘಾಳ ಜೊತೆ ಪ್ರೇಮ ಪ್ರಸಂಗ ನಡೆಸುತ್ತಾರೆ ಚಾಣಕ್ಯರಾದಂತಹ ಗೃಹ ಮಂತ್ರಿಗಳು. ಪ್ರಧಾನ ಮಂತ್ರಗಳು ತಮ್ಮ ಪದವಿಯನ್ನು ಉಳಿಸಿಕೊಳ್ಳುತಾರೆಯೇ? ಸಿಂಹ ಜಯಭೇರಿ ಹಾಡುತ್ತಾರೆಯೇ? ಗೃಹ ಮಂತ್ರಿ ಮತ್ತು ಮೇಘ-ರ ಪ್ರೇಮದ ಕಥೆಗೆ ಕೊನೆಯೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ ನಾಟಕ. ಹಾಗೆ ನೀಡುತ್ತಾ, ಈಗಿನ ರಾಜಕೀಯ ವ್ಯವಸ್ಥೆಯ ಟೀಕೆ, ಹಲವು ವಿವಾದಗಳ ಬಗ್ಗೆ ವಿಮರ್ಶೆ/ವಿಡಂಬನೆಗಳನ್ನು ಸಹ ಮಾಡುತ್ತದೆ.

(ಈ ಲೇಖನ ಬರೆದ ನಂತರ ಈ ನಾಟಕದ ನಿರ್ದೇಶಕರು ಹವ್ಯಾಸಿ ನಿರ್ದೇಶಕರಲ್ಲ, ವೃತ್ತಿಪರರೇ ಎಂಬುದು ತಿಳಿಯಿತು. ಅವರು ಈ ಹಿಂದೆ ಸಂಪ್ರದಾಯಬದ್ಧ ನಾಟಕಗಳನ್ನು ನಿರ್ದೇಶಿಸಿರುವರೋ ಅಥವಾ ಇದೇ ರೀತಿಯ ವಿಭಿನ್ನ ಶೈಲಿಯ ನಾಟಕಗಳನ್ನೇ ನಿರ್ದೇಶಿಸಿರುವರೋ ನನಗೆ ತಿಳಿಯದು. ಏನೇ ಆಗಲಿ, ತಾನು ವೃತ್ತಿಪರನಾದರೂ ಹವ್ಯಾಸಿ ಪಾತ್ರಧಾರಿಗಳ ಕೈಲಿ ಚೆನ್ನಾಗಿ ನಾಟಕ ಮಾಡಿಸುವುದು ಸುಲಭದ ಮಾತಲ್ಲ; ಆದರೂ ಮಾಡಿಸಿದ್ದಾರೆ.)