"ನಮ್ಮ ರಾಜ್ಯದ ಪ್ರಜೆಗಳೆಲ್ಲರೂ ಸುಖವಾಗಿರುವರಷ್ಟೇ? ನಮ್ಮ ನಾಡಿನಲ್ಲಿ ಎಲ್ಲೆಡೆಯೂ ಸುಖ ಸಮೃದ್ಧಿ ಇರುವುದಷ್ಟೇ?" ಎನ್ನುವ ಪಕ್ಕಾ ತಾತರಾಯನ ಕಾಲದ ಪೌರಾಣಿಕ ನಾಟಕದ ಮಂತ್ರಿಗಳನ್ನೂ ಬಹುಶಃ ನೋಡಿರುತ್ತೀರಿ, ಆದರೆ ನಾಟಕದಲ್ಲಿ ಮಾತ್ರ. ಕಲಿಯುಗದ ಕಾಲು ಭಾಗವೂ ಮುಗಿದಿಲ್ಲವಂತೆ. ಅದಕ್ಕೇ ಇರಬೇಕು, ಇಂದಿನ ಮಂತ್ರಿಗಳು ಇನ್ನೂ ಕದ್ದು ಮುಚ್ಚಿ ಲಂಚ ತಿನ್ನುತ್ತಾರೆ! ಭ್ರಷ್ಟಾಚಾರವನ್ನು ಸಕ್ರಮಗೊಳಿಸುವೆವೆಂದು ಆಶ್ವಾಸನೆ ಕೊಟ್ಟು ಅದನ್ನೇ ಚುನಾವಣೆಯ ಬಂಡವಾಳವನ್ನಾಗಿ ಮಾಡಿಕೊಳ್ಳುವ ಮಂತ್ರಿಗಳೂ ಇಷ್ಟರಲ್ಲೇ ಹುಟ್ಟಿ ಬರುತ್ತಾರೆ; ನೀವೂ ನೋಡುವಿರಿ. ಇನ್ನು, ಸುಮಾರಾಗಿ ಪ್ರಾಮಾಣಿಕರು ಎನ್ನುವಂಥ ಮಂತ್ರಿಗಳೂ ಇರುತ್ತಾರೆ; ನಾವೂ ಒಬ್ಬಿಬ್ಬರನ್ನು ನೋಡಿರುತ್ತೀವಿ.
ಆದರೆ ಈ ಎಲ್ಲಾ ರೀತಿಗಳನ್ನೂ ಒಂದೇ ಕಡೆ ನೋಡಿದ್ದುಂಟೇ? ’ನರಸಿಂಹ ಯುದ್ಧಂ’ ಎನ್ನುವ ನಾಟಕ ನೋಡಿದ ಜನರಿಗೆ
ಮೈಂಡ್ರೈ.ಇನ್ ತಂಡದವರು ರಂಗಮಂಚದ ಮೇಲಂತೂ ಹೆಚ್ಚು-ಕಮ್ಮಿ ಇಷ್ಟೂ ರೀತಿಗಳನ್ನೂ ಒಂದೇ ನಾಟಕದಲ್ಲಿ ಪ್ರದರ್ಶಿಸಿದರು. ಹವ್ಯಾಸಕ್ಕೆ ವಿನೋದದ ವಿಡಿಯೋಗಳನ್ನು ಮಾಡುತ್ತಿದ್ದ ಮೈಂಡ್ರೈ.ಇನ್ ತಂಡದವರು ಅದನ್ನು ಅಂತರ್ಜಾಲದ ಮೂಲಕ ಜನಕ್ಕೆ ತಲುಪಿಸಿ ಜನರ ಮೆಚ್ಚುಗೆ ಸಂಪಾದಿಸಿದ್ದು ಈಗ ಒಂದೆರಡು ವರ್ಷದ ಇತಿಹಾಸ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆಸಕ್ತಿಯಿಂದ ಇದೇ ’ನರಸಿಂಹ ಯುದ್ಧಂ’ ನಾಟಕದ ಮೊದಲ ಪ್ರದರ್ಶನ ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತು. ಈಗ ಕಥೆಯನ್ನು ಸ್ವಲ್ಪ ತಿರುಚಿ ಅದೇ ನಾಟಕವನ್ನು ಇನ್ನಷ್ಟು ಚೆನ್ನಾಗಿ ಮಾಡಿದ್ದಾರೆ.
ನಾಟಕದ ವಿಷಯ ಏನೆಂದು ನಾನು ಹೇಳುವುದಿಲ್ಲ. ಅವರೇ ನಾಟಕಕ್ಕೆ ಹೋದವರಿಗೆ ಹಂಚಿದ ಚೀಟಿಯಲ್ಲಿ ಚಿಕ್ಕದಾಗಿ ನಾಟಕದ ವಿಷಯ ತಿಳಿಸುತ್ತಾರೆ. ಅದನ್ನೇ ಕೊನೆಯಲ್ಲಿ ಯಥಾವತ್ತಾಗಿ ಬರೆಯುತ್ತೇನೆ. ಆದರೆ ಅವರು ಹೇಳಿಕೊಳ್ಳದ ಕೆಲವು ವಿಷಗಳನ್ನು ಮಾತ್ರ ತಿಳಿಸಲು ಬಯಸುತ್ತೇನೆ.
ಈ ತಂಡದ ಹಿರಿವಂತಿಕೆ ಎಂದರೆ ಸಂಪ್ರದಾಯಕ್ಕೆ ಅಂಟುಕೊಳ್ಳದಿರುವುದು! ಇವರ ನಾಟಕಕ್ಕೆ ಸೂತ್ರವಿದೆ, ಸೂತ್ರಧಾರನಿಲ್ಲ! ಮೋಜಿನ ಕಲಬೆರಕೆ ಹಾಡುಗಳಿವೆ, ಆದರೆ ನಾಟಕದ ವಸ್ತುವಿಗೆ ಸಂಬಂಧವಿಲ್ಲದ ಹಾಡುಗಳು! ತಮ್ಮ ಪ್ರತಿಭೆಯನ್ನು ರಂಗಮಂಚದ ಮೇಲೆ ತೋರಿಸುತ್ತಿದ್ದಾರೆ ಎನ್ನುವುದು ಬಿಟ್ಟರೆ ನಾಟಕದ ಪಾತ್ರಧಾರಿಗಳೆಲ್ಲಾ ಹವ್ಯಾಸಿ ಕಲಾವಿದರು. ಇವರಿಗೊಬ್ಬ ಹವ್ಯಾಸಿ ನಿರ್ದೇಶಕ ಕೂಡ! ’ಇನ್ನು ಐವತ್ತೆರಡೇ ಸೆಕೆಂಡುಗಳಲ್ಲಿ ನಾಟಕ ಶುರುವಾಗುತ್ತದೆ’ ಎಂಬ ಮೊದಲನೆಯ ವಾಕ್ಯದಿಂದ ಕೊನೆಯ ತನಕವೂ ಶುದ್ಧ ತರಲೆ ತುಂಬಿದ ವಾಕ್ಯಗಳು! ಆದರೆ ನಾಟಕದ ವಸ್ತು ಅಷ್ಟೇ ಅರ್ಥಪೂರ್ಣ, ಸ್ವಸ್ಥ ಸಮಾಜಕ್ಕೆ ಅವಶ್ಯಕ ಕೂಡ. ಈ ಮಂದಿ ಜುಬ್ಬ-ಪ್ಯಾಂಟ್ ಹಾಕಿ ರಾಜನ ಪಾತ್ರ ಮಾಡುತ್ತಾರೆ, ಕ್ರಿಕೆಟಿಗನನ್ನು ರಾಜಕಾರಣಿ ಮಾಡುವುದಲ್ಲದೇ ಕ್ರಿಕೆಟ್ ಆಡಲು ಉಪಯೋಗಿಸುವ ಬಿಳಿಯ ಉಡುಗೆಯನ್ನೇ ರಾಜಕಾರಣಿಗೂ ಹಾಕುತ್ತಾರೆ! ಸಂಪ್ರದಾಯಕ್ಕೆ ಹೋಲಿಸಿದರೆ ಎಲ್ಲೆಲ್ಲೂ ವಿಭಿನ್ನತೆ, ವಿಶಿಷ್ಟತೆ!
ನೀವು ನಾಟಕದ ವಿಷಯದಲ್ಲಿ ಸಂಪ್ರದಾಯಸ್ಥರಾದರೂ ಸಂಪ್ರದಾಯ ಮುರಿವ, ಮರೆಸುವ ಈ ತಂಡದವನ್ನು ನೋಡಬೇಕು. ಯಾವುದೇ ಪ್ರಸಿದ್ಧ ನಾಟಕದ ಕಂಪನಿಗೂ ಸೇರದೇ ಹವ್ಯಾಸಿಗಳು ಏನನ್ನು ಸಾಧಿಸಿದ್ದಾರೆ ಎಂದು ಒಮ್ಮೆಯಾದರೂ ನೋಡಿ. ನೀವು ವಿನೋದಪ್ರಿಯರೋ ಅಲ್ಲವೋ, ಮೊದಲ ನಿಮಿಷದಿಂದ ಕೊನೆಯ ನಿಮಿಷದ ತನಕವೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ, ನಡುವೆ ಹತ್ತು ನಿಮಿಷದ ವಿರಾಮ ಬಿಟ್ಟು!
ಹಾಸ್ಯ ಇವರ ನಾಟಕದ ಜೀವಾಳ. ಆದರೆ ನಾಟಕದ ಸಂದೇಶ ತಿಳಿಯಲು ಹಾಸ್ಯವೇ ಬಾಧಕವೂ ಕೂಡ. ನಾಟಕ ನೋಡುತ್ತಾ ನೋಡುತ್ತಾ ನಗುವಿನಲ್ಲೇ ನೀವು ಕಳೆದುಹೋಗಬಹುದು. ನಗುತ್ತಲೇ ನಾಟಕದ ಸಂದೇಶವನ್ನೂ ತಿಳಿಯುವುದು ಸ್ವಲ್ಪ ಕಷ್ಟವೇ. ಒಂದೊಂದು ನಗೆಹನಿಯ ಹಿಂದೆಯೂ ಒಂದೊಂದು ಸಂದೇಶದ ಮಣಿ ಇರುತ್ತದೆ. ಕೊನೆಯಲ್ಲಿ ಮಣಿಗಳನ್ನೆಲ್ಲಾ ಪೋಣಿಸಿದರೆ ಮಾತ್ರ ನಾಟಕದ ಸಂದೇಶ ನಿಮಗೆ ತಿಳಿಯುತ್ತದೆ. ಇದರ ಬಗ್ಗೆ ಎಚ್ಚರವಿಲ್ಲದಿದ್ದರೆ ಒಂದುವರೆ ತಾಸು ಚೆನ್ನಾಗಿ ನಕ್ಕು ಬರುತ್ತೀರಿ ಅಷ್ಟೇ!
ಸಂಪ್ರದಾಯದ ಪ್ರಕಾರ ನಾಟಕ ಮಾಡುವ ಮಂದಿ ಇದ್ದಾರೆ. ಆದರೆ ಕಲಾವಿದನೊಬ್ಬ ಸಂಪ್ರದಾಯಕ್ಕೆ ಅಂಟಿಕೊಂಡರೆ ನಾಟಕನ್ನು ತನ್ನ ವೃತ್ತಿ ಅಥವಾ ಕಿರುವೃತ್ತಿಯನ್ನಾದರೂ ಮಾಡಿಕೊಳ್ಳಬೇಕು. ಹಾಗೆ ಮಾಡದೆಯೂ ಯಶಸ್ಸು ಸಾಧಿಸಿರುವ, ಸಾಧಿಸುತ್ತಿರುವ ಕೆಲವೇ ಮಂದಿಯಲ್ಲಿ ಮೈಂಡ್ರೈ.ಇನ್ ತಂಡದವರೂ ಸೇರುತ್ತಾರೆ.
ನಾಟಕದ ಬಗ್ಗೆ - ಅವರೇ ಹೇಳಿಕೊಳ್ಳುವಂತೆ:
"ನರಸಿಂಹ ಯುದ್ಧಂ - ಒಂದು ಪ್ರೇಮದ ಕಥೆ" - ಮೈಂಡ್ರೈ.ಇನ್ ತಂಡದ ಎರಡನೆಯ ಪ್ರಸ್ತುತಿ. ಪ್ರಚಲಿತ ರಾಜಕೀಯ ವಿದ್ಯಮಾನಗಳ ಒಂದು ವಿಡಂಬನೆಯಾಗಿದ್ದು, ಈ ನಾಟಕದ ಮಧ್ಯೆ ನವಿರಾದ ಪ್ರೇಮಕಥೆಯು ಹಾಸುಹೊಕ್ಕಾಗಿದೆ. ರಾಜಕೀಯ ಚದುರಂಗ, ಮಾಧ್ಯಮಗಳು ವೀಕ್ಷಕರನ್ನು ಸೆಳೆಯಲು ಮಾಡುವ ತಂತ್ರಗಳು, ರಾಜಕಾರಣಿಗಳ ಬಂಡವಾಳವಿಲ್ಲದ ಬಡಾಯಿ, ಈ ವಿಷಯಗಳನ್ನೊಳಗೊಂಡು ನಮ್ಮ ನಾಟಕವು ಏಪ್ರಿಲ್ ೯-ನೇ ತಾರೀಕು ಸಂಜೆ ೬:೩೦-ಕ್ಕೆ ಮತ್ತು ೧೧-ನೇ ತಾರೀಕು ಸಂಜೆ ೭:೩೦-ಕ್ಕೆ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾ ಸೌಧದಲ್ಲಿ ಪ್ರದರ್ಶನಗಳು ಕಾಣಲಿದೆ.
ನಾಟಕದಲ್ಲಿ ಪ್ರಮುಖ ಪಾತ್ರವಾದ ಪ್ರಧಾನ ಮಂತ್ರಿಯ ಊಂದು ಕೃತ್ಯದಿಂದ ಆಡಳಿತ ಪಕ್ಷವು ಮತ್ತೊಮ್ಮೆ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಆ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯ ಎದುರಾಳಿಯಾಗಿ ಬರುವ ಹಮ್ಮೀರನೆಂದರೆ, ಹೆಸರಾಂತ ಮಾಜಿ ರಣಜಿ ಕ್ರಿಕೆಟ್ ಪಟು ಸಿಂಹ. ಜನರೆಲ್ಲರೂ ಅಲ್ಪರು, ತಾನೂ ಅಲ್ಪ, ಆ ಭಗವಂತನ ಮುಂದೆ ಎಲ್ಲರೂ ಅಲ್ಪರೇ ಎಂದು ಭಾವಿಸುರ ಈ ವಿನಯವಂತ ಕ್ರೀಡಾಪಟು ದೇಶದ ಪರಿಸ್ಥಿತಿಯನ್ನು ಕಾಣಲಾಗದೇ ರಾಜಕೀಯದ ರೌದ್ರ ರಣರಂಗಕ್ಕೆ ಇಳಿಯಲು ನಿರ್ಧರಿಸುತ್ತಾನೆ. ಇವರೀರ್ವರ ಹಣಾನಣಿ ನಡೆಯುವ ಹಿನ್ನೆಲೆಯಲ್ಲಿ, ಮಾಧ್ಯಮ ಪ್ರತಿನಿಧಿ ಮೇಘಾಳ ಜೊತೆ ಪ್ರೇಮ ಪ್ರಸಂಗ ನಡೆಸುತ್ತಾರೆ ಚಾಣಕ್ಯರಾದಂತಹ ಗೃಹ ಮಂತ್ರಿಗಳು. ಪ್ರಧಾನ ಮಂತ್ರಗಳು ತಮ್ಮ ಪದವಿಯನ್ನು ಉಳಿಸಿಕೊಳ್ಳುತಾರೆಯೇ? ಸಿಂಹ ಜಯಭೇರಿ ಹಾಡುತ್ತಾರೆಯೇ? ಗೃಹ ಮಂತ್ರಿ ಮತ್ತು ಮೇಘ-ರ ಪ್ರೇಮದ ಕಥೆಗೆ ಕೊನೆಯೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ ನಾಟಕ. ಹಾಗೆ ನೀಡುತ್ತಾ, ಈಗಿನ ರಾಜಕೀಯ ವ್ಯವಸ್ಥೆಯ ಟೀಕೆ, ಹಲವು ವಿವಾದಗಳ ಬಗ್ಗೆ ವಿಮರ್ಶೆ/ವಿಡಂಬನೆಗಳನ್ನು ಸಹ ಮಾಡುತ್ತದೆ.
(ಈ ಲೇಖನ ಬರೆದ ನಂತರ ಈ ನಾಟಕದ ನಿರ್ದೇಶಕರು ಹವ್ಯಾಸಿ ನಿರ್ದೇಶಕರಲ್ಲ, ವೃತ್ತಿಪರರೇ ಎಂಬುದು ತಿಳಿಯಿತು. ಅವರು ಈ ಹಿಂದೆ ಸಂಪ್ರದಾಯಬದ್ಧ ನಾಟಕಗಳನ್ನು ನಿರ್ದೇಶಿಸಿರುವರೋ ಅಥವಾ ಇದೇ ರೀತಿಯ ವಿಭಿನ್ನ ಶೈಲಿಯ ನಾಟಕಗಳನ್ನೇ ನಿರ್ದೇಶಿಸಿರುವರೋ ನನಗೆ ತಿಳಿಯದು. ಏನೇ ಆಗಲಿ, ತಾನು ವೃತ್ತಿಪರನಾದರೂ ಹವ್ಯಾಸಿ ಪಾತ್ರಧಾರಿಗಳ ಕೈಲಿ ಚೆನ್ನಾಗಿ ನಾಟಕ ಮಾಡಿಸುವುದು ಸುಲಭದ ಮಾತಲ್ಲ; ಆದರೂ ಮಾಡಿಸಿದ್ದಾರೆ.)